ಅಕಾಲಿಕ ಮಳೆಗೆ ನಲುಗಿದ ರೈತ...! ಹೂ ಬೆಳೆಗಾರರಿಗೆ ಭಾರೀ ನಷ್ಟ...
ಗದಗ: ಈ ಬಾರಿ ಯುಗಾದಿ ಹಬ್ಬದ ಮುನ್ನ ಉತ್ತಮ ಆದಾಯದ ನಿರೀಕ್ಷೆಯಲ್ಲಿ ಹೂ ಬೆಳೆ ಬೆಳೆದಿದ್ದ ಗದಗದ ರೈತರಿಗೆ ಅಕಾಲಿಕ ಮಳೆ ಭಾರೀ ಹೊಡೆತ ನೀಡಿದೆ. ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆ ,ಹೂ ಬೆಳೆಗಳಿಗೆ ದೊಡ್ಡ ಮಟ್ಟದ ಹಾನಿ ಉಂಟುಮಾಡಿದ್ದು, ಸಾವಿರಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗದಗ ಜಿಲ್ಲೆಯ ಲಕ್ಕುಂಡಿ, ಕನವಿ, ಹೊಸೂರು, ಡಂಬಲ್, ಕಡಕೋಳ ಸೇರಿದಂತೆ ಹಲವಾರು ಗ್ರಾಮಗಳು ಹೂ ಬೆಳೆಗಾಗಿ ಪ್ರಸಿದ್ಧವಾಗಿವೆ. ಇಲ್ಲಿ ಬೆಳೆಯುವ ಚೆಂಡು ಮಲ್ಲಿಗೆ,ಸೇವಂತಿಗೆ ಮತ್ತು ಮಲ್ಲಿಗೆ ಹೂಗಳು ಪ್ರತಿದಿನವೂ ಧಾರವಾಡ, ಬೆಳಗಾವಿ ಹಾಗೂ ರಾಜ್ಯದ ಇತರೆ ಮಾರುಕಟ್ಟೆಗಳಿಗೆ ಸಾಗಾಟವಾಗುತ್ತವೆ. ವಿಶೇಷವಾಗಿ ಯುಗಾದಿ ಹಬ್ಬದ ಸಮಯದಲ್ಲಿ ಈ ಹೂಗಳಿಗೆ ಭಾರೀ ಬೇಡಿಕೆ ಇರುತ್ತದೆ. ಆದರೆ, ಅಕಾಲಿಕ ಮಳೆಯ ಪರಿಣಾಮವಾಗಿ ಹೂಗಳ ಗುಣಮಟ್ಟ ಕುಸಿದು, ಮಾರುಕಟ್ಟೆಗೆ ಕಳುಹಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಮಳೆಯ ಜೊತೆಗೆ ಬಂದ ಬಿರುಗಾಳಿಯಿಂದ ಹೂ ಗಿಡಗಳು ನೆಲಕ್ಕುರುಳಿವೆ. ನೀರು ನಿಂತಿರುವುದರಿಂದ ಗಿಡಗಳ ಬೇರುಗಳು ಕೊಳೆತು ಹೋಗಿದ್ದು, ಬೆಳೆ ಸಂಪೂರ್ಣ ಹಾನಿಯಾಗಿದೆ. ಇನ್ನೂ ಹೂ ಬಿಡದ ಮೊಗ್ಗುಗಳೇ ಕುಸಿದು ಹೋಗಿರುವುದರಿಂದ ಮುಂದಿನ ದಿನಗಳಲ್ಲೂ ಉತ್ಪಾದನೆ ಕಡಿಮೆಯಾಗುವ ಭೀತಿ ಇದೆ. ಈಗಾಗಲೇ ಕಟಾವು ಮಾಡಿದ್ದ ಹೂಗಳು ಕೂಡ ಮಳೆ ನೀರಿಗೆ ತೋಯ್ದು ಹಾಳಾಗಿವೆ.
ಇತರೆ ಸುದ್ದಿಗಳು