ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...
ಸಂಸತ್ತು ಜನ ವಿಶ್ವಾಸ್ ವಿದೇಯಕ 2026 ಅಂಗೀಕರಿಸಿದ್ದು ಇದು ಜನರ ಜೀವನ ಸರಳಗೊಳಿಸಲು ಮತ್ತು ವ್ಯವಹಾರಗಳನ್ನು ಸುಗಮಗೊಳಿಸುವತ್ತ ಒಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗಿದೆ . ಪ್ರಕರಣಗಳ ತ್ವರಿತ ವಿಲೇವಾರಿ ಜನಸಾಮನ್ಯರು ಮತ್ತು ವ್ಯಾಪಾರಿಗಳ ದೈನಂದಿನ ಜೀವನ ಸರಳ ಸುಲಭ ಮತ್ತು ಸುಗಮಗೊಳಿಸಲಿದೆ ಎಂದು ನೀರಿಕ್ಷಿಸಲಾಗಿರುವ ಕಾಯಿದೆ ಇದಾಗಿದೆ ಜನ ವಿಶ್ವಾಸ ವಿಧೇಯಕ 2026 ಸಣ್ಣಪುಟ್ಟ ತಾಂತ್ರಿಕ ಪ್ರಮಾದಗಳಿಗೆ ಜೈಲು ಶಿಕ್ಷೆ ಬದಲು ದಂಡ ವಿಧಿಸಿ, ಉದ್ಯಮಸ್ನೇಹಿ ವಾತಾವರಣ ನಿರ್ಮಿಸುತ್ತದೆ. 80 ಕೇಂದ್ರೀಯ ಕಾನೂನುಗಳ 784 ನಿಬಂಧನೆಗಳನ್ನು ಸುಧಾರಿಸಿದ್ದು, 700ಕ್ಕೂ ಹೆಚ್ಚು ಅಪರಾಧಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸಿದೆ. ಇದು ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟಪ್ ಇಂಡಿಯಾಗೆ ಉತ್ತೇಜನ ನೀಡಿ, ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಲೋಕಸಭೆಯಲ್ಲಿ 2026ರ ಮಾರ್ಚ್ 27ರಂದು ಮಂಡನೆಯಾದ ಮಹತ್ವದ ‘ಜನ ವಿಶ್ವಾಸ ತಿದ್ದುಪಡಿ ವಿಧೇಯಕ 2026’ ಏಪ್ರಿಲ್ 1ರಂದು ಅಂಗೀಕಾರಗೊಂಡಿತು. ಮರುದಿನವೇ ರಾಜ್ಯಸಭೆಯಲ್ಲೂ ಇದಕ್ಕೆ ಅನುಮೋದನೆ ದೊರೆಯಿತು. ಸಣ್ಣಪುಟ್ಟ ತಾಂತ್ರಿಕ ತಪ್ಪುಗಳಿಗೆ ಜೈಲು ಶಿಕ್ಷೆಯ ಬದಲು ಕೇವಲ ದಂಡ ವಿಧಿಸುವ ಮೂಲಕ ಉದ್ಯಮಸ್ನೇಹಿ ವಾತಾವರಣ ನಿರ್ಮಿಸುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ. ಇದು ಏಕರೂಪದ ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ.24 ಸದಸ್ಯರ ಆಯ್ಕೆ ಸಮಿತಿಯು 49 ಸಭೆಗಳನ್ನು ನಡೆಸಿ, ನಾನಾ ಸಚಿವಾಲಯಗಳು, ತಜ್ಞರು ಹಾಗೂ ಉದ್ಯಮ ವಲಯದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ವಿಧೇಯಕಕ್ಕೆ ಅಂತಿಮ ರೂಪ ನೀಡಲಾಗಿದೆ. ಈ ಸುಧಾರಣಾ ವಿಧೇಯಕವು 80 ಕೇಂದ್ರೀಯ ಕಾನೂನುಗಳ 784 ನಿಬಂಧನೆಗಳನ್ನು ಬದಲಾಯಿಸಿದೆ. 42 ಕೇಂದ್ರೀಯ ಕಾನೂನುಗಳಲ್ಲಿದ್ದ 183 ಕ್ರಿಮಿನಲ್ ದಂಡನೆಗಳನ್ನು ರದ್ದುಪಡಿಸಲಾಗಿದೆ. ಒಟ್ಟಾರೆ 717 ನಿಬಂಧನೆಗಳನ್ನು ಕ್ರಿಮಿನಲ್ ದಂಡನೆಯಿಂದ ಮುಕ್ತಗೊಳಿಸಲಾಗಿದ್ದು, ಉಳಿದ 67 ನಿಬಂಧನೆಗಳನ್ನು ಜನಜೀವನವನ್ನು ಸುಗಮಗೊಳಿಸುವ ಗುರಿಯೊಂದಿಗೆ ಮಾರ್ಪಡಿಸಲಾಗಿದೆ. ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ, ರಿಟರ್ನ್ ಸಲ್ಲಿಸದಿರುವುದು, ದಾಖಲೆಗಳನ್ನು ಇಟ್ಟುಕೊಳ್ಳದಿರುವುದು ಮುಂತಾದ ಸಣ್ಣಪುಟ್ಟ ಪ್ರಮಾದಗಳನ್ನು ಇನ್ನು ಮುಂದೆ ಕ್ರಿಮಿನಲ್ ಅಪರಾಧಗಳೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ಔಷಧ ತಯಾರಕ ಕಂಪನಿಗಳ ವಿರುದ್ಧದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿದ್ದ ಸಂಕೀರ್ಣ ಲೈಸೆನ್ಸ್-ಕೋಟಾ ವ್ಯವಸ್ಥೆ ಹಾಗೂ 2012ರ ಪೂರ್ವಾನ್ವಯ ತೆರಿಗೆ ತಿದ್ದುಪಡಿಯಿಂದಾಗಿ ಜಾಗತಿಕ ಹೂಡಿಕೆದಾರರಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆಯಾಗಿತ್ತು. ಆದರೆ, ಕಳೆದೊಂದು ದಶಕದಲ್ಲಿ ಮೋದಿ ಸರ್ಕಾರವು ಕಾನೂನುಗಳನ್ನು ಸರಳಗೊಳಿಸುವ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಮರಳಿ ಗಳಿಸಿದೆ. ಇದರ ಪರಿಣಾಮವಾಗಿ ಭಾರತವು ವಿಶ್ವಬ್ಯಾಂಕ್ನ ಈಸ್ ಆಫ್ ಡೂಯಿಂಗ್ ಬಿಸಿನೆಸ್ ರ್ಯಾಂಕಿಂಗ್ನಲ್ಲಿ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದ್ದು, 2025-26ರಲ್ಲಿ $790.86 ಶತಕೋಟಿ ಡಾಲರ್ ರಫ್ತು ವಹಿವಾಟು ನಡೆಸಿದೆ. ಈ ವಿಧೇಯಕವು 700ಕ್ಕೂ ಹೆಚ್ಚು ಸಣ್ಣಪುಟ್ಟ ಕ್ರಿಮಿನಲ್ ಅಪರಾಧಗಳನ್ನು ರದ್ದುಪಡಿಸಿರುವುದರಿಂದ, ನ್ಯಾಯಾಲಯಗಳ ಮೇಲಿನ ಒತ್ತಡ ಶೇ. 25-30ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ನ್ಯಾಯಾಲಯಗಳಲ್ಲಿ 4.8 ಕೋಟಿ ಪ್ರಕರಣಗಳು ಬಾಕಿ ಇದ್ದು, ಇನ್ನು ಮುಂದೆ ಸಣ್ಣ ತಪ್ಪುಗಳಿಗೆ ಕೋರ್ಟ್ ಬದಲು ಸಂಬಂಧಪಟ್ಟ ಅಧಿಕಾರಿಗಳೇ ತೀರ್ಪು ನೀಡಲಿದ್ದಾರೆ. ಒಟ್ಟಾರೆಯಾಗಿ, ಜನ ವಿಶ್ವಾಸ ತಿದ್ದುಪಡಿ ವಿಧೇಯಕ 2026ರ ಮೂಲಕ ಸರ್ಕಾರವು ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂಬ ಆಶಯವನ್ನು ಸಾಕಾರಗೊಳಿಸಿದೆ. ದಂಡ ಆಧಾರಿತ ವ್ಯವಸ್ಥೆಯಿಂದ ವಿಶ್ವಾಸ ಆಧಾರಿತ ಆಡಳಿತ ಮಾದರಿಗೆ ಬದಲಾಗುವ ಮೂಲಕ ಇದು ಭಾರತದ ಉದ್ದಿಮೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ, ನಾಗರಿಕ ಸ್ನೇಹಿ ವ್ಯವಸ್ಥೆಯನ್ನು ರೂಪಿಸಿದೆ.
ಇತರೆ ಸುದ್ದಿಗಳು