ಮದ್ದೂರಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಪರಿಸರ ಜಾಗೃತಿ ಕಾರ್ಯಕ್ರಮ
ಪ್ರತಿದಿನ ಉಂಟಾಗುತ್ತಿರುವ ತ್ಯಾಜ್ಯದಲ್ಲಿ ಜೀವಸಂಕುಲಕ್ಕೆ ಕಂಟಕಪ್ರಾಯವಾದ ಏಕಬಳಕೆಯ ಪ್ಲಾಸ್ಟಿಕ್ ವಿಲೇವಾರಿ ಆಡಳಿತ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿ ಹಾಗೂ ಮದ್ದೂರು ನಗರಸಭೆ ಪೌರಾಯುಕ್ತ ಪರಶುರಾಮ ಸತ್ತಿಗೇರಿ ಆತಂಕ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ ಹಾಗೂ ನಗರಸಭೆ ಮದ್ದೂರು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸುವರ್ಣ ಮಹೋತ್ಸವದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಡಂಪಿಂಗ್ ಯಾರ್ಡ್ಗಳು ಈಗ ಪ್ಲಾಸ್ಟಿಕ್ ಗುಡ್ಡಗಳಾಗಿ ಮಾರ್ಪಟ್ಟಿವೆ. ಪ್ಲಾಸ್ಟಿಕ್ ಬಾಟಲಿಗಳು, ತಿಂಡಿಗಳ ಕವರ್ಗಳು ಜಲಮೂಲ ಸೇರಿ ಮಾಲಿನ್ಯ ಉಂಟುಮಾಡುತ್ತಿವೆ. ಯಾವ ನಗರವೂ ಈ ಸಮಸ್ಯೆಯಿಂದ ಹೊರತಾಗಿಲ್ಲ,” ಎಂದು ಹೇಳಿದರು.
ಪ್ಲಾಸ್ಟಿಕ್ನ ದುಷ್ಪರಿಣಾಮಗಳ ಕುರಿತು ಜಾಗೃತಿ ಸಂಪನ್ಮೂಲ ವ್ಯಕ್ತಿ ಜಗದೀಶ ಮಾತನಾಡಿ, “ರಸ್ತೆ ಬದಿಯಲ್ಲಿ ಬಿದ್ದಿರುವ ಒಂದೊಂದು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ಸೇರಿ ದೊಡ್ಡ ಪ್ರಮಾಣದ ತ್ಯಾಜ್ಯ ಉಂಟುಮಾಡುತ್ತವೆ. ಅದು ಮುಂದೆ ಬೃಹದಾಕಾರವಾಗಿ ಬೆಳೆಯುತ್ತ ಪರಿಸರಕ್ಕೆ ಅಪಾಯ ಉಂಟುಮಾಡುತ್ತದೆ,” ಎಂದು ಹೇಳಿದರು.
ಯುವಕರಿಗೆ ಕಿವಿಮಾತು “ನಮ್ಮ ನಗರವನ್ನು ಸ್ವಚ್ಛವಾಗಿ ಇಡಲು ಪ್ರತಿಯೊಬ್ಬ ಯುವಕರೂ ಮುಂದಾಗಬೇಕು. ತ್ಯಾಜ್ಯ ಜಲಮೂಲಗಳಲ್ಲಿ ಸೇರುವುದನ್ನು ತಡೆಯಿ, ಜಲಚರ ಪ್ರಾಣಿಗಳ ರಕ್ಷಣೆಗೆ ಸಹಕರಿಸಿ,” ಎಂದು ಕರೆ ನೀಡಿದರು.
ಪ್ಲಾಸ್ಟಿಕ್ ಹೊದಿಕೆಯಾದ ರಸ್ತೆ — ಹೊಸ ಪ್ರಯೋಗ ಮಳೆಯ ಪ್ರಮಾಣ ಹೆಚ್ಚಿರುವ ಕರಾವಳಿ ಪ್ರದೇಶಗಳಲ್ಲಿ ಡಾಂಬರ್ ರಸ್ತೆಗಳಲ್ಲಿ ಹೊಂಡಗಳು ಉಂಟಾಗುವುದನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ಕಚೇರಿಯು 67 ಕಿ.ಮೀ ಪ್ಲಾಸ್ಟಿಕ್ ಹೊದಿಕೆಯಾದ ರಸ್ತೆ ನಿರ್ಮಾಣ ಯೋಜನೆ ಕೈಗೊಂಡಿದೆ. ಈ ಯೋಜನೆ ಪರಿಸರ ಸ್ನೇಹಿ ಪ್ರಯೋಗವಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಜಾಗೃತಿ ಚಟುವಟಿಕೆಗಳು ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಲು ಪ್ರಬಂಧ ಸ್ಪರ್ಧೆ ನಡೆಸಿ ವಿಜೇತರನ್ನು ಗೌರವಿಸಲಾಯಿತು. ನಂತರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತ ಸ್ವಚ್ಛತೆಯ ಜಾಗೃತಿ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಇ.ಓ ರಾಮಲಿಂಗಯ್ಯ, ಬಿ.ಇ.ಓ ಧನಂಜಯ ಎಸ್., ನಗರಸಭೆ ಪರಿಸರ ಅಭಿಯಂತರ ಅರ್ಚನಾ ಆರಾಧ್ಯ, ತಾಲ್ಲೂಕು ಕಚೇರಿ ಹಾಗೂ ನಗರಸಭೆಯ ಸಿಬ್ಬಂದಿಗಳು ಸೇರಿದಂತೆ 150 ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು