64ನೇ ವಸಂತಕ್ಕೆ ಕಾಲಿಟ್ಟ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು 64ನೇ ವಸಂತಕ್ಕೆ ಕಾಲಿಟ್ಟಿದ್ದು, ಸದಾಶಿವನಗರದ ನಿವಾಸದಲ್ಲಿ ಸಂಭ್ರಮ ಮನೆಮಾಡಿದೆ. ಮುಂಜಾನೆಯೇ ಡಿಸಿಎಂ ಮನೆ ಮುಂದೆ ಆಗಮಿಸಿದ ವೇದ ವಿದ್ವಾಂಸರು ಹಾಗೂ ಋತ್ವಿಕರು ಮನ್ಯುಸೂಕ್ತ ಮಂತ್ರಗಳ ಪಠಣದೊಂದಿಗೆ, ವೇದಘೋಷದೊಂದಿಗೆ ಡಿ ಕೆ ಶಿವಕುಮಾರ್ ಅವರಿಗೆ ಆಯುಷ್ಯ ಮತ್ತು ಅಧಿಕಾರ ಪ್ರಾಪ್ತಿಯಾಗಲೆಂದು ಹರಸಿದ್ದಾರೆ. ನೂರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತನ್ನ ನಾಯಕತ್ವದ ಗುಣಗಳಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಬೆಳೆದು ಉನ್ನತ ಸ್ಥಾನಕ್ಕೇರಿರುವ ಡಿಕೆಶಿ ನಡೆದು ಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. 1989 ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಆ ಸಮಯದಲ್ಲಿ ಡಿಕೆಶಿ ಅವರಿಗೆ ಕೇವಲ 27 ವರ್ಷ ವಯಸ್ಸಾಗಿತ್ತು. ಕಾಂಗ್ರೆಸ್ ಟಿಕೆಟ್ ಪಡೆದ ಶಿವಕುಮಾರ್ ಅವರು 1994, 1999 ಮತ್ತು 2004 ರಲ್ಲಿ ನಡೆದ ನಂತರದ ವಿಧಾನಸಭಾ ಚುನಾವಣೆಗಳಲ್ಲಿ ಅದೇ ಕ್ಷೇತ್ರದಿಂದ ಮರುಚುನಾವಣೆಯಲ್ಲಿ ಗೆದ್ದರು. ಅವರು 2008, 2013, 2018 ಮತ್ತು 2023 ರಲ್ಲಿ ಕನಕಪುರ ಕ್ಷೇತ್ರದಿಂದ ಗೆದ್ದು ರಾಜ್ಯ ರಾಜಕೀಯದಲ್ಲಿ ಪ್ರಮುಖ ರಾಜಕಾರಣಿಯಾಗಿ ಬೆಳೆದಿದ್ದಾರೆ. ತಮಿಳುನಾಡಿಗೆ ಇಂದು ಪ್ರಯಾಣ ಬೆಳೆಸಲಿದ್ದಾರೆ.ಅವರ 64ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು, ನಾಯಕರು ಮತ್ತು ಕಾರ್ಯಕರ್ತರು ಅವರಿಗೆ ಶುಭಾಶಯ ಕೋರಿದರು.