ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!
ಬೆಂಗಳೂರಿನ ಟೌನ್ಹಾಲ್ ಮುಂಭಾಗದಲ್ಲಿ ಮೇ 24ರಂದು ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ ಸಂಘಟನೆಯ ಮಾನವ ಸರಪಳಿ ಪ್ರತಿಭಟನೆಗೆ ಬೆಂಗಳೂರು ನಗರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.ಈ ಪ್ರತಿಭಟನಾ ಸಭೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳ ಕುರಿತು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಪ್ರಕಟಣೆ ಹೊರಡಿಸಿದ್ದು, ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ನೀಡಿದೆ.ಪೊಲೀಸರು ಬ್ರೇಕ್ ಹಾಕಲು ಪ್ರಮುಖ ಕಾರಣಗಳನ್ನು ನೀಡಿದ್ದಾರೆ .ನ್ಯಾಯಾಲಯದ ಆದೇಶದ ಉಲ್ಲಂಘನೆ ಕರ್ನಾಟಕ ಹೈಕೋರ್ಟ್ನ 2022ರ ಆದೇಶದ ಪ್ರಕಾರ, ಬೆಂಗಳೂರಿನಲ್ಲಿ ಯಾವುದೇ ರೀತಿಯ ಧರಣಿ, ರ್ಯಾಲಿ ಅಥವಾ ಪ್ರತಿಭಟನೆಗಳನ್ನು ನಡೆಸಲು ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅವಕಾಶವಿಲ್ಲ. ಟೌನ್ಹಾಲ್ ಬಳಿ ಇಂತಹ ಸಭೆ ನಡೆಸುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ.ಈ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲು ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಪಕ್ಷವು ಪೊಲೀಸ್ ಇಲಾಖೆಯಿಂದ ಅಥವಾ ಸ್ಥಳೀಯ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಯಿಂದ ಯಾವುದೇ ಅಧಿಕೃತ ಅನುಮತಿ ಪಡೆದಿಲ್ಲ. ಭಾನುವಾರ ಬೆಳಗ್ಗೆ 11 ಗಂಟೆಗೆ ಜನರನ್ನು ಸೇರಲು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗಿತ್ತು. ಇದರಿಂದ ನಗರದ ಹೃದಯಭಾಗದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ದಟ್ಟಣೆಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.ಸಾರ್ವಜನಿಕರಿಗೆ ಪೊಲೀಸರ ಕಟ್ಟುನಿಟ್ಟಿನ ಸೂಚನೆಗಳು. ಸಾರ್ವಜನಿಕರು ತಿಳಿದೋ ಅಥವಾ ತಿಳಿಯದೆಯೋ ಮೇ 24ರಂದು ಟೌನ್ಹಾಲ್ ಬಳಿ ಪ್ರತಿಭಟನೆಗಾಗಿ ಗುಂಪು ಸೇರಬಾರದು ಎಂದು ವಿನಂತಿಸಲಾಗಿದೆ.ಪೋಸ್ಟ್ ಹಂಚಿಕೊಂಡರೆ ಕಾನೂನು ಕ್ರಮ: ಕಾಕ್ರೋಚ್ ಜನತಾ ಪಾರ್ಟಿಯ ಈ ಮಾನವ ಸರಪಳಿಗೆ ಸಂಬಂಧಿಸಿದ ಯಾವುದೇ ಮೆಸೇಜ್ ಅಥವಾ ಪೋಸ್ಟ್ಗಳನ್ನು ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಅಥವಾ ಫಾರ್ವರ್ಡ್ ಮಾಡಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.