ಆಮೆಗತಿಯಲ್ಲಿ ಸಾಗುತ್ತಿರುವ ರಾಮನಗರ ರೈಲು ನಿಲ್ದಾಣದ ಕಾಮಗಾರಿ ...
ರಾಮನಗರ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ನಿಲ್ದಾಣದ ಸುತ್ತಮುತ್ತ ತೋಡು-ತುಂಬುಗಳೇ ಕಾಣಿಸುತ್ತಿವೆ. ಇನ್ನೊಂದೆಡೆ ಇದರಿಂದಾಗಿ ಪ್ರಯಾಣಿಕರು ದಿನನಿತ್ಯ ಧೂಳಿನ ನಡುವೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ಲಾಟ್ಫಾಮ್ರ್ಗಳಲ್ಲಿ ನಡೆಯುವ ಪ್ರಯಾಣಿಕರು ಧೂಳಿನ ನಡುವೆಯೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈಲು ನಿಲ್ದಾಣದ ಪ್ರವೇಶ ದ್ವಾರ ಮತ್ತು ಪಾರ್ಕಿಂಗ್ಗಳಲ್ಲಿ ಮಾಸ್ಕ್ ಇಲ್ಲದೆ ನಿಲ್ಲುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಸಿಲ್ಕ್ ಸಿಟಿ ಎಂದೇ ಖ್ಯಾತಿಯಾಗಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಕೇಂದ್ರ ರಾಮನಗರ ರೈಲು ನಿಲ್ದಾಣಕ್ಕೆ ಪ್ರಧಾನ ಮಂತ್ರಿ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿಯಲ್ಲಿ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಇದು ಜಿಲ್ಲೆಯ ಜನರ ಖುಷಿಗೆ ಕಾರಣವಾಗಿದೆ. ಆದರೆ ಆಧುನೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಪ್ರಧಾನ ಮಂತ್ರಿ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಲ್ಲಿ ದೇಶದಾದ್ಯಂತ ಬರೋಬ್ಬರಿ 554 ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರಕಾರ ಚಾಲನೆ ನೀಡಿತ್ತು. ಈ ಯೋಜನೆಯಡಿಯಲ್ಲಿ ರಾಜ್ಯದ 54 ರೈಲು ನಿಲ್ದಾಣಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಈ ಪೈಕಿ ರಾಮನಗರ ಮತ್ತು ಚನ್ನಪಟ್ಟಣ ರೈಲು ನಿಲ್ದಾಣಗಳ ಅಭಿವೃದ್ಧಿಗೂ ಚಾಲನೆ ದೊರೆತಿತ್ತು. ಆದರೆ ರಾಮನಗರ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಆರಂಭವಾಗಿ ಎರಡು ವರ್ಷಗಳೇ ಕಳೆದರೂ ಇಂದಿಗೂ ಪೂರ್ಣಗೊಂಡಿಲ್ಲ. ಹೀಗಾಗಿ ರೈಲು ನಿಲ್ದಾಣ ಅವ್ಯವಸ್ಥೆಯ ಆಗರವಾಗಿ ಬದಲಾಗಿದ್ದು, ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ.ಆಧುನೀಕರಣಗೊಳ್ಳುತ್ತಿರುವ ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ಕಟ್ಟಡದ ಜತೆಗೆ ಪ್ರಯಾಣಿಕರಿಗೆ ಬೇಕಾದ ಎಸ್ಕ್ಲೇಟರ್ ವ್ಯವಸ್ಥೆ, ದಿವ್ಯಾಂಗರಿಗೆ ಬೇಕಾದ ಅನುಕೂಲತೆ, ಪಾರ್ಕಿಂಗ್ ವ್ಯವಸ್ಥೆ, ಉತ್ತಮ ಪ್ರವೇಶ ದ್ವಾರ ಹಾಗೂ ವೇಟಿಂಗ್ ಹಾಲ್ ನಂತಹ ಸೌಲಭ್ಯಗಳು ಇರಲಿವೆ. ಇಲಾಖೆಯ ಅಧಿಕಾರಿಗಳು ಕಳೆದ ಆರು ತಿಂಗಳ ಹಿಂದಿನಿಂದಲೂ ಶೇ.90ರಷ್ಟು ಕಾಮಗಾರಿ ಮುಗಿದಿದ್ದು, ಶೀಘ್ರದಲ್ಲಿಯೇ ನೂತನ ರೈಲ್ವೆ ನಿಲ್ದಾಣದ ಉದ್ಘಾಟನೆಯಾಗಲಿದೆ ಎನ್ನುತ್ತಿದ್ದಾರೆ. ಆದರೆ ಕೆಲಸಗಳು ನಿಧಾನಗತಿಯಲ್ಲಿಸಾಗುತ್ತಿರುವುದರಿಂದ, ನಿರೀಕ್ಷಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದೇ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಇತರೆ ಸುದ್ದಿಗಳು