ಹಾಸ್ಯ ಸಾಮ್ರಾಟ್ ಬಿರುದು ಪಡೆದ ಖ್ಯಾತ ಹಾಸ್ಯ ಭಾಷಣಕಾರ ಪ್ರಾಣೇಶ್
ಹೋಂ ಡಾಕ್ಟರ್ಸ್ ಫೌಂಡೇಷನ್ ಉಡುಪಿ ಪ್ರವರ್ತಿತ ಸ್ವರ್ಗ ಆಶ್ರಮ ಕೊಳಲಗಿರಿ ಕಟ್ಟಡ ನಿರ್ಮಾಣ ಸಹಾಯಾರ್ಥವಾಗಿ ಕೊಳಲಗಿರಿಯ ಸಿಂಧೂರ ಸಭಾಂಗಣದಲ್ಲಿ ಭಾನುವಾರ ರಾತ್ರಿ ‘ಸ್ವರ್ಗದಲ್ಲೊಂದು ಹಾಸ್ಯ ಸಂಜೆ’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಮತ್ತು ಅವರ ತಂಡದವರಿಂದ ನಡೆದ ಹಾಸ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಇದೇ ವೇಳೆ ಗಂಗಾವತಿ ಪ್ರಾಣೇಶ್ ಅವರಿಗೆ ‘ಹಾಸ್ಯ ಸಾಮ್ರಾಟ್’ ಬಿರುದು ನೀಡಿ ವಿಶೇಷವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಾಸ್ಯದ ರಸದೌತಣವನ್ನು ಪ್ರೇಕ್ಷಕರು ಸವಿದರೆ, ಸ್ವರ್ಗ ಆಶ್ರಮದ ಕಟ್ಟಡ ನಿರ್ಮಾಣಕ್ಕೆ ನೆರವು ಸಂಗ್ರಹಿಸುವ ಉದ್ದೇಶವೂ ಯಶಸ್ವಿಯಾಯಿತು. ಹೋಂ ಡಾಕ್ಟರ್ಸ್ ಫೌಂಡೇಷನ್ನ ಮುಖ್ಯಸ್ಥ ಡಾ. ಶಶಿಕಿರಣ್ ಶೆಟ್ಟಿ ಅವರನ್ನು ಮನು ಹಂದಾಡಿ, ಬಸವರಾಜ್ ಮಹಾಮನಿ ಹಾಗೂ ಡಾ. ಬೆಣ್ಣೆ ಸೇರಿದಂತೆ ಗಣ್ಯರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಫೌಂಡೇಷನ್ ಸದಸ್ಯರಾದ ಡಾ. ಸುಮಾ ಶೆಟ್ಟಿ, ಬಂಗಾರಪ್ಪ ಉದಯ್ ನಾಯ್ಕ, ಅರುಣ್ ಜತ್ತನ್, ಪ್ರವೀಣ್ ಜತ್ತನ್, ಜೀವನ್ ಜತ್ತನ್, ಸುದರ್ಶನ್ ಜತ್ತನ್, ಕಿರಣ್ ಜತ್ತನ್, ಮಿಲಿತ್ ಹೆಗ್ಡೆ, ರಾಘವೇಂದ್ರ ಪೂಜಾರಿ, ವಾಣಿಶ್ರೀ, ಸುಂದರ್ ಪೂಜಾರಿ, ರಾಘವೇಂದ್ರ ಕರ್ವಾಲು, ಸಂಧ್ಯಾ ಶೆಣೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.